ಲಖನೌ: ಅಮೇಠಿ, ರಾಯಬರೇಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಬೆಂಬಲಿಸಬೇಕು ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ತಮ್ಮ ಬೆಂಬಲಿಗರಿಗೆ ಮನವಿ ಮಾಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಅಧ್ಯಕ್ಷ ರಾಹುಲ್ ಗಾಂಧಿ, ಅವರ ತಾಯಿ ಸೋನಿಯಾಗಾಂಧಿ ಈ ಕ್ಷೇತ್ರಗಳಲ್ಲಿ ಕಣದಲ್ಲಿದ್ದಾರೆ. ಸೋಮವಾರ ಈ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಮಾಯಾವತಿ ಹೇಳಿಕೆ ಕಾಂಗ್ರೆಸ್ ಬಲ ಹೆಚ್ಚಿಸಿದೆ.
ರಾಜ್ಯದಲ್ಲಿ ಬಿಎಸ್ಪಿ, ಆರ್ಎಲ್ಡಿ ಮತ್ತು ಸಮಾಜವಾದಿ ಪಕ್ಷದ ನಡುವೆ ಮಹಾಮೈತ್ರಿ ಏರ್ಪಟ್ಟಿದ್ದರೂ, ಮೈತ್ರಿಕೂಟ ಉಭಯ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ.
‘ಕಾಂಗ್ರೆಸ್ನ ಉನ್ನತ ನಾಯಕರಿಗೆ ಹಿನ್ನಡೆ ಆಗಬಾರದು ಎಂಬ ಕಾರಣದಿಂದ ನಾವು (ಮೈತ್ರಿಕೂಟ) ಈ ಎರಡು ಕ್ಷೇತ್ರಗಳನ್ನು ಕೈಬಿಟ್ಟಿದ್ದೇವೆ. ಸ್ಪರ್ಧೆ ಮಾಡಿದ್ದರೆ ಅದರ ಲಾಭವನ್ನು ಬಿಜೆಪಿ ಪಡೆಯುತ್ತಿತ್ತು’ ಎಂದು ಅವರು ಹೇಳಿದ್ದಾರೆ.
‘ನಮ್ಮ ಪಕ್ಷ ಇಲ್ಲಿ ಶೇ 22ರಿಂದ 23ರಷ್ಟು ಮತಬ್ಯಾಂಕ್ ಹೊಂದಿದೆ. ಬಿಎಸ್ಪಿಯ ಎಲ್ಲ ಬೆಂಬಲಿಗರು ಅಮೇಠಿ ಮತ್ತು ರಾಯಬರೇಲಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಲಿದ್ದಾರೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾಯಾವತಿ ಅವರು ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ಹರಿಹಾಯುತ್ತಿದ್ದರು ಎಂಬುದು ಇಲ್ಲಿ ಗಮನಾರ್ಹ.